Thursday, December 22, 2016

ವರುಣ

ವರುಣ ಕೊಟ್ಟರೆ
ನಮಗೆ ಹಿಡಿಯಲಿ
ತಮಿಳುನಾಡಿಗೆ
ಕೊಡುವನು ಬೊಗಸೆಯಲಿ

                      --ಕವಿತಾ ಗೋಪಿಕುಂಟೆ 

ಪಾಠ

ಹರೆಯದ ನೋಟ
ಮಿಂಚಿನ ಓಟ
ತರುವುದು ಬದುಕಿಗೆ
ಬಹುದೊಡ್ಡ ಪಾಠ

             --ಕವಿತಾ ಗೋಪಿಕುಂಟೆ 

Monday, December 19, 2016

ಬಾಳಮುಗಿಲು

ಮುಂಗಾರ ಬಾಳಮುಗಿಲಲ್ಲಿ
ಮೋಡ ಆನಂದದಿ ಕೆಂಪಾಗಿ
ಪ್ರೀತಿ ಕವಿತೆಗಳ ಅಮೃತಸಿಂಚನ
ನವಭಾವ ನವಿಲನರ್ತನ

                      --ಕವಿತಾ ಗೋಪಿಕುಂಟೆ

Monday, December 12, 2016

ತಿಥಿ ನಾಟಕ

ಜೀವನದಿಗಾಗಿ
ಕ್ಯಾತೆತೆಗೆದು
ಜೀವಜಲವ
ಕಸಿದುಕೊಂಡರು

ರಕ್ತಸುರಿಸಿ
ಹೋರಾಡಿದೆವು
ಗುಂಡೇಟಿಗೆ
ಪ್ರಾಣತೆತ್ತೆವು

ನರಳಾಟ ಕಂಡು
ಆರ್ತನಾದ ಕೇಳಿ
ಮನ ಕರಗದೇ
ನಿಂತರವರು

ವರುಣನೆ ಕರಗಿ
ಸಾಕೆನುವಷ್ಟು ಹರಸಿ
ದೋಣಿ ಭಾಗ್ಯ
ತಂದನು

ಮಡಿದವನ ಕೂಗು
ಮನೆಯವರ ಶಾಪ
ದೇವರ ತಲುಪಿ
ತಿಥಿಯ ನಾಟಕ
ನಿಜವಾಗಿಸಿದನು

                      --ಕವಿತಾ ಗೇೂಪಿಕುಂಟೆ

Sunday, December 11, 2016

ಮರೆತಿದ್ದರೆ ದುಡ್ಡು

ಹೋಟೆಲ್ಲಲ್ಲಿ ತಿಂದುಂಡು
ಮರೆತಿದ್ದರೆ ತರಲು ದುಡ್ಡು
ಆಗೆಲ್ಲಾ
ರುಬ್ಬಬೇಕಿತ್ತು ಅಕ್ಕಿಹಿಟ್ಟು
ಈಗೆಲ್ಲಾ
ಉಜ್ಜಬೇಕು ಕಾರ್ಡುಇಟ್ಟು

                      --ಕವಿತಾ ಗೋಪಿಕುಂಟೆ  

Thursday, December 8, 2016

ಡೆಲಿವರಿ

ಸಿಜೇರಿಯನ್
ಡೆಲಿವರಿಯಲ್ಲುಟ್ಟಿದ
ಕವಿತೆಗಿಂತ
ನಾರ್ಮಲ್
ಡೆಲಿವರಿಯಲ್ಲುಟ್ಟಿದ
ಕವಿತೆ
ಭಾವಪೂರ್ಣ
ಅರ್ಥಪೂರ್ಣ


       --ಕವಿತಾ ಗೇೂಪಿಕುಂಟೆ

ಹಿ(ತೈಷಿ)ತಶತ್ರು

ಹಿತೈಷಿಗಳ ಹಿತ
ನುಡಿಗಳ ಶಕ್ತಿಗಿಂತ
ಹಿತಶತ್ರುಗಳ ಚುಚ್ಚುಮಾತಿನ
ಇರಿತದ ನೋವೇ ಮೇಲು
ಮಲಗಿರುವ ಮನವ
ಬಡಿದೆಬ್ಬಿಸಲು
ಸಾಧನೆಯ ಹಾದಿಯ
ಹುಡುಕಲು ಪ್ರೇರೇಪಿಸಲು

          --ಕವಿತಾ ಗೇೂಪಿಕುಂಟೆ

ನಾ ಕಟ್ಟುವ ಕವಿತೆ

ಕಟ್ಟಬೇಕೊಂದು ಕವಿತೆಯ
ಜೀತದಾಳ ಮೈಮೇಲಿನ
ಬಾಸುಂಡೆಗಳ ತಂದು
ಅಸಹಾಯಕ ಹೆಣ್ಣುಗಳ
ಕಣ್ಣೀರ ಮುತ್ತುಗಳ ತಂದು
ಬಡವ ಸವೆಸಿದ
ಮೂಳೆಗಳ ತಂದು

ನಾ ಕಟ್ಟಿದ ಕವಿತೆ
ಉಳ್ಳವರ ಕತ್ತಿಗೆ
ಉರುಳಾಗಬೇಕು
ಕಾಳಧನಿಕರ ಕಾಲಿಗೆ
ಸರಪಳಿಯಾಗಬೇಕು
ದರ್ಪತೋರ್ವನಿಗೆ
ದಂಡಿಸಲೆಬೇಕು

ನೊಂದವರಲ್ಲಿ
ನಿಟ್ಟುಸಿರ ತರಬೇಕು
ಹೆಂಗೆಳೆಯರಲ್ಲಿ  
ಮಂದಹಾಸ ಬಿರಿಸಬೇಕು
ಕಾಲಾದ ನನ್ನವರಿಗೆ
ಚಿರಶಾಂತಿ ಕೊಡಿಸಲುಬೇಕು


                                  --ಕವಿತಾ ಗೇೂಪಿಕುಂಟೆ

ಮೂರು ಸಾಲು

ಮದುವೆ ದಿನದಿ
ತುಂಬಿಸಿಟ್ಟೆವು *ಆನಂದ*ದಿ
*ಕವಿತೆ*ಗಳ ಕೊಡದೊಳಗೆ

ಸಂಸಾರ ನೊಗ ಹೊತ್ತು
ಉಳಲು ನಿಂತೆವು
ಹಸನಾಗಿಸಲು ಬಾಳದಾರಿ

ಕ್ಷಣಾರ್ಧದಲಿ
ಕಾಣೆಯಾಗಿವೆ
ಮೂರು ಕವಿತೆಗಳು

ಬಾಳಹೊಲದೊಳಗೆ
ಮೂಡಿಹೆವು
ಮೂರು ಸಾಲುಗಳು

ಕಾಣೆಯಾದ ಕವಿತೆಗಳಲಿ
ಮೂಡಿದ ಸಾಲ್ಗಳಲಿ
ಏನಿದೆಯೆಂದಷ್ಟೇ ಗೊತ್ತೆಮಗೆ

ಉಳಿದ ಕವಿತೆಗಳ
ಮೂಡುವ ಸಾಲುಗಳ
ಬಲ್ಲವನು ಅವನಷ್ಟೆ

                     --
ಕವಿತಾ ಗೇೂಪಿಕುಂಟೆ

ಶಾಲಾಲಂಗ

ರೈತನೊಬ್ಬನ ಮಗಳ
ಶಾಲಾಲಂಗದ ಮೇಲಿನ
ಹರಿದೊಲಿದ ಗಂಟುಗಳು
ಅಪ್ಪನ ಬೆನ್ನ
ಮೇಲಿನ ಬರೆಗಳು
ಅಮ್ಮನ ಅಸಹಾಯಕತೆಯ
ಮೊಗದ ಗೆರೆಗಳು
ಬಡವಳೆಂದು ಸಾರುವ
ಹಣೆಪಟ್ಟಿಗಳು
ಅವಳ ಕೆರಳಿಸುವ ಕಲೆಗಳು
ಛಲವ ಮೊಗೆವ ಚಡಿಗಳು
ಕೊನೆಗೆ
ಅವಳ ಸಾಧನೆಯ ಸಾರುವ
ಪಳೆಯುಳಿಕೆಗಳು
               --ಕವಿತಾ ಗೇೂಪಿಕುಂಟೆ

ಮರುಜನ್ಮ

ಸಾವಿನಾಚೆಗೆ ನಿಂತಿದೆ
ಸತ್ತುಟ್ಟುವ ಜನ್ಮ
ತಾಯಿಯಾಗಿ ಪಡೆವ
ಮರುಜನ್ಮ

              --ಕವಿತಾ ಗೇೂಪಿಕುಂಟೆ

ತ್ಯಾಗಮಯಿ


ನನ್ನಸಿದೊಟ್ಟೆಯ ಕೂಗು
ಅವ್ವನ ಕಾಲ್ಗೆಜ್ಜೆ ಸದ್ದು
ಬಿಕ್ಕಳಿಕೆಯೆ ಅವಳ
ಕೈಬಳೆ ನಾದ

ಒಲೆಕಿಡಿ ಕಾರಿದ ಕುಪ್ಪಸದ ಚುಕ್ಕಿ
ಚಂದಮ್ಮನ ಮೇಲಕಲೆ
ನೊಂದರಿದ ಸೀರೆ
ತೆಂಗಿನ ಚಪ್ಪರ

ಗಂಜಿಯ ಕುಡಿದು ಜೊಲ್ಲನು ಸುರಿಸಿ
ತೀಡಿದೆನು ಕುಪ್ಪಸಕೆ
ಮಳೆಗು ಬಿಸಿಲಿಗು ಗುಮ್ಮವ ಕಂಡು
ಅಡಗಿದೆನು ಸೆರಗಿನಲಿ

ಗೊಣ್ಣೆಗೆ ರಟ್ಟಾದ ಕುಪ್ಪಸವನೆ ತೊಟ್ಟು
ಉಚ್ಚೆಯಲಿ ತೊಯ್ದ ಸೀರೆಯ ಉಟ್ಟು
ಎಲ್ಲವ ಸಹಿಸಿ  ಎಲ್ಲವ ತೊರೆದು
ಜೀವಕ್ಕಾಗಿ ಜೀವವನೇ ತೇಯ್ದಳು

ಜಗವನು ಗೆದ್ದ ಕೀರ್ತಿಯನೆಲ್ಲ
ಅವಳ ಮೂಗುತಿಯಲ್ಲೇ ಇರಿಸುವೆನು
ಜಗದೆಲ್ಲ ಸುಖವನು ತಂದು
ಅವಳ ಕಾಲ್ಕೆಳಗೆ ಇರಿಸುವೆನು

                                  --ಕವಿತಾ ಗೋಪಿಕುಂಟೆ

Tuesday, November 29, 2016

ಅಮ್ಮ

ದಿನಗಳ  ದಾರದಿ
ಬುದ್ದಿವಂತಿಕೆ ಸೂಜಿಯಿಂದ
ಹರಿದ ಭವಿಷ್ಯವ
ಹೊಲಿಯುತ್ತಿದ್ದಾಳೆ ಅಮ್ಮ

ಮನದ ಕಣಕೆ
ಬೇಲಿ ಕಟ್ಟಿ
ಆತ್ಮವಿಶ್ವಾಸದ
ಸಗಣಿ ಸಾರಿಸಿ
ಹೆಣೆಯುತ್ತಿದ್ದಾಳೆ ಅಮ್ಮ
ನನ್ನ ಹಸನಾದ ನಾಳೆಗಳ

                           --ಕವಿತಾ ಗೋಪಿಕುಂಟೆ 

Friday, November 25, 2016

ಜಾಗತೀಕರಣದ ಕರಿನೆರಳು

ಜಾಗತೀಕರಣದ ಜಾಗಟೆ 
ಸದ್ದು ಎಲ್ಲೆಲ್ಲೂ ಹರಡಿದೆ 
ಬಹುರಾಷ್ಟ್ರೀಯ ಕಂಪನಿಗಳು 
ಕಾಳ್ಗೀಚಿನಂತೆ ಹಬ್ಬುತ್ತಿವೆ 

ಕೃಷಿ ಮರೆತು ಜಾಣರೆಲ್ಲ 
ವಲಸೆ ಬಂದಾಗಿದೆ 
ನಗರೀಕರಣ ಸುನಾಮಿಯಂತೆ 
ಆವರಿಸುತ್ತಿದೆ 

ಏರುತಿದೆ  ಜನಸಂಖ್ಯೆ 
ಹಾಕುವವರಿಲ್ಲ ಅಂಕೆ 
ಕಾಡೆಲ್ಲ ರೋಡಾಗಿ ಕೃಷಿಭೂಮಿ 
ಕಾಂಕ್ರೀಟು ಕಾಡಾಗಿದೆ 

ಬಿಳಿ ಭಾಷೆ ಸೆರಗಿಡಿದು 
ತಾಯಿನುಡಿಯ ನಿರ್ಲಕ್ಷಿಸಿ 
ತಮ್ಮತನವ ಮರೆಸಿ ಪಾಶ್ಚ್ಯಾತ್ಯ  
ಸಂಸ್ಕೃತಿಯ ಮೆರೆಸುತಿದೆ 

ವಿದೇಶಿಗರೇ ದೇವರಾಗಿ 
ವಿದೇಶಿಬಂಡವಾಳವೇ ನಾಡಿಯಾಗಿ 
ಲಾಭ ನಷ್ಟಗಳೆ ಮಿಡಿತಗಳಾಗಿ 
ಮನುಷ್ಯತ್ವವನು ಮರೆಯಾಗಿಸಿದೆ 

ಸಂಬಂಧಗಳಿಗೆ ಬೆಲೆಕಟ್ಟಿ 
ಹೆತ್ತವರನ್ನು ದೂರ ಸರಿಸಿ 
ವೃದ್ದಾಶ್ರಮಗಳನು ಸೃಷ್ಟಿಸಿ 
ಅನಾಥರಂತೆ ಬದುಕಿಸುತಿದೆ 

ಜಾಗರೂಕ ಮನಗಳಲ್ಲಿ 
ತಲ್ಲಣವ ಸೃಷ್ಟಿಸಿ 
ಜಾಗತಿಕ ಕರಿನೆರಳು 
ಕೇಕೆಹಾಕಿ ನಗುತಲಿದೆ 

                          --ಕವಿತಾ ಗೋಪಿಕುಂಟೆ 

ಕವಿಗೋಷ್ಠಿ

ವಯೋಬೇಧವಿಲ್ಲದೆ 
ಕವಿಗಳೆನಿಸಿಕೊಂಡವರ 
ಒಂದೆಡೆ ಸೇರಿಸುವುದು ಕವಿಗೋಷ್ಠಿ 

ಕವಿತೆರೂಪದಲಿ ತಂದ 
ಕಲ್ಪನೆ ಅನುಭವಗಳ ಬಂಡಾರವ 
ಜಗತ್ತಿಗೆ ಸಾರುವ ವೇದಿಕೆ ಕವಿಗೋಷ್ಠಿ 

ತಪ್ಪು ಒಪ್ಪುಗಳ ಅರಿತು 
ಹಿರಿಯರ ಮಾರ್ಗದರ್ಶನ ಪಡೆದು 
ಬರೆವ ಹಂಬಲ ತರುವ ಶಕ್ತಿ ಕವಿಗೋಷ್ಠಿ 


                                --ಕವಿತಾ ಗೋಪಿಕುಂಟೆ 

ನೋವರುಚಿ

ಕಣ್ಣೀರ ಉಪ್ಪಾಕಿ
ಎದೆಯುರಿಯ
ಖಾರವಾಕಿ
ಬೇಯಿಸಿದರೂ
ರುಚಿಸುವುದಿಲ್ಲ ನೋವು

                  --ಕವಿತಾ ಗೋಪಿಕುಂಟೆ 

Thursday, October 13, 2016

ತುತ್ತು ಅನ್ನಕ್ಕಾಗಿ

ತಾಯಗರ್ಭದ ಭ್ರೂಣದಿ
ಬೆನ್ನಿಗಂಟುವ ಹಸಿವು
ಉಸಿರು ನಿಂತು ಚಿತೆ
ಏರಿದಾಗಲೇ ಬಿಡುವುದು

ನಮ್ಮಗಳ ಹೋರಾಟ
ದೈನಂದಿನ ಪರದಾಟ
ವಿಲ ವಿಲ ಒದ್ದಾಟ
ತುತ್ತು ಅನ್ನಕ್ಕಾಗಿಯೇ

ವಿಧಿಯಗಾಳಕೆ ಸಿಕ್ಕಿ
ಬಡತನವೆ ಹಾಸಿಗೆ
ಹಸಿವೇ ಹೊದಿಕೆಯಾದಾಗ
ಕಾಡುವುದು ಅನ್ನದ ಕನಸು

ಸ್ಥಾನಮಾನ ಕಾಣದು
ಹಸಿದ ಕಣ್ಣಿಗೆ
ಮನದ ಮಾತು ಕೇಳದು
ಹಸಿದೊಟ್ಟೆಯ ಕೂಗಿಗೆ

ವಿದ್ಯೆ ವಿನಯಗಳ ಮರೆಸಿ
ಮಾನ ಮರ್ಯಾದೆಗಳ ಥಳಿಸಿ
ಕ್ರೌರ್ಯವನು ಮೆರೆಸುವುದು
ಹಸಿವ ನೀಗಿಸುವ
ತುತ್ತು ಅನ್ನಕ್ಕಾಗಿಯೇ

                                         --ಕವಿತಾ ಗೋಪಿಕುಂಟೆ 

Sunday, October 2, 2016

ಕೂಲಿಗಾಗಿ ಕಾಳು


ಬಡವರು ಹೊಟ್ಟೆವರಿಯುವ
ಸಲುವಾಗಿ ಸರ್ಕಾರ
ತಂದಿದೆಯೊಂದು ಯೋಜನೆ
ಅದುವೇ
ಕೂಲಿಗಾಗಿ ಕಾಳು ಯೋಜನೆ

ಬಹುಪಾಲು ಹಳ್ಳಿಗಳಿಗೆ
ಇದರ ಗಂಧವೇ ಸೋಕಿಲ್ಲ
ತಿರುಗಾಡುತಿಹುದು
ಅಧಿಕಾರಿ ಬಳಗದಲ್ಲೆಲ್ಲ

ಉಸ್ತುವಾರಿಯನ್ನು
ಗುತ್ತಿಗೆದಾರ ಪಡೆವ
ಕೆಲಸಕ್ಕಾಗಿ
ಯಂತ್ರಗಳ ತರುವ

ಅಧ್ಯಯನ ತಂಡ
ಇಣುಕುವಾಗ
ನೆಪಮಾತ್ರಕೆ
ಕೂಲಿಯಾಳುಗಳ
ಕರೆತರುವ

ಕೂಲಿಗಾಗಿ ಕಾಳು
ಯೋಜನೆಯಲ್ಲವಿದು  
ಅಧಿಕಾರಿಗಾಗಿ
ಕಾಳು ಯೋಜನೆ

                                            --ಕವಿತಾ ಗೋಪಿಕುಂಟೆ 

Friday, September 30, 2016

ಗುಳೆ


ಬಂದಿಲ್ಲ ಮಳೆ
ಬಿತ್ತಿಲ್ಲ ಬೆಳೆ
ಬತ್ತಿಹುದು ತೊರೆ
ಹಿಂಗಿಹುದು ಕೆರೆ

ಬಂದಿಹುದು ಬರಗಾಲ
ತಂದಿಹುದು ಹಾಹಾಕಾರ
ಕುಡಿಯಲು ನೀರಿಲ್ಲ
ದನಕರುಗೆ ಮೇವಿಲ್ಲ

ಸರ್ಕಾರದವರು ಬಂದು
ಬರಪರಿಹಾರ ಘೋಷಿಸಿದರು
ಲಕ್ಷ ಲಕ್ಷ ನಿಧಿಯ
ಕಡತದಲ್ಲಿ ತೋರಿಸಿದರು

ಕಾಲುವೆಯ ದಾಹದಂತೆ
ಅಧಿಕಾರಿಗಳ ಧನದಾಹದಿ
ಹೆಸರಿಗೆ ಬಂದದ್ದು
ಕೈಗೆ ಬಾರದಾಗಿ
 
ಗಂಜಿಗಾಗಿ ಪರದಾಡಿ
ದನಕರುಗಳ ಮಾರಿ
ಹೊಲಮನೆಯ ಅಡವಿಟ್ಟು
ಸಾಲಗಾರನಾಗಿ

ಕಣ್ಣು ಬಾಯಿಬಿಟ್ಟು
ಪರಿಹಾರಕಾದು ಬೇಸರಿಸಿ
ವಿಧಿಯಿಲ್ಲದೆ ಹೊರಟಿಹನು
ನಮ್ಮ ರೈತ ಗುಳೆ

                                       --ಕವಿತಾ ಗೋಪಿಕುಂಟೆ 

Monday, September 26, 2016

ಕೊಂಡ


ಸೀತೆ ರಾಮನವಳೆಂದು
ನಿರೂಪಿಸಲು
ಅಗ್ನಿಗಾರಿದಹಾಗೆ
ಕಾವೇರಿ ನಮ್ಮವಳೆಂದು
ತೋರಿಸಲು
ಕಿಚ್ಚಿನ ಕೆಂಡ ಹಾಸಿ
ಕೊಂಡ ಹಾಯಬೇಕೆ .?

--ಕವಿತಾ ಗೋಪಿಕುಂಟೆ 

27/1/2015 ರ ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ನನ್ನಕವನ "ಆತ್ಮದ ಸೆಳೆತ"


Friday, September 23, 2016

ಕಣ್ಣೀರಧಾರೆ



ಈ ಸೃಷ್ಟಿಯೇ ಕಣ್ಣು
ಕಣ್ಣಗುಡ್ಡೆಯೇ ನೆಲ
ರಸಧಾತುವೇ ಜಲ
ನರನಾಡಿಗಳೇ ಮರಗಿಡ
ರೆಪ್ಪೆಗಳೇ ಓಜೋನ್ 

ಸೃಷ್ಟಿ ಸಲಹಲೆಂದೇ
ಹಣೆಯ ಮೇಲಿರಿಸಿಕೊಂಡಿಹನು
ಮುಕ್ಕಣ್ಣನು ಮೂರನೇ ಕಣ್ಣನು
ಸೃಷ್ಟಿ ಶಾಂತಿಯಿಂದಿರಲು
ಅವ ಶಾಂತಿಯಿಂದಿರುವನು 

ಉಪಟಳವು ಅತಿಯಾಗಿ
ಬಿಸಿಯೇರಿ ಹೊಗೆಯಾಡಿ
ಮಲಿನ ಆವರಿಸಿ
ಧೂಳು ಬಡಿದಾಗ
ತೆರೆವನು ಮುಕ್ಕಣ್ಣನು
ಮೂರನೆಯ ಕಣ್ಣನು 

ತರುವನು ವಿಕಿರಣವನು  
ಅಳಿವಿನಂಚಿನ ಸುಳಿವನು
ಸುನಾಮಿಯಂತ ಕಣ್ಣೀರರಿಸಿ
ನರನಾಡಿಗಳ ನರಳಾಡಿಸಿ
ತಂದೊಡ್ಡುವನು ವಿನಾಶವನು 


                                     
 --ಕವಿತಾ ಗೋಪಿಕುಂಟೆ 

Saturday, September 17, 2016

ಮಣ್ಣಿನ ಸೆಳೆತ

ಏನೇನೋ ಓದಿ ಎಷ್ಟೆಲ್ಲಾ ಡಿಗ್ರಿ ತಗೊಂಡು ವಿಶ್ವ ಸುತ್ತಿ ಬಂದ್ರು ಒಂದು ನೆಲೆ ಅಂತ ತೋರಿಸೋದು ನಮ್ಮ ತವರು ನೆಲ. ಆ ತವರು ನೆಲದ ಸೆಳೆತಕ್ಕೆ ಸಿಕ್ಕಿ ಕಂಪ್ಯೂಟರ್ ಬಿಟ್ಟು ಮೇಟಿ ಹಿಡಿದ ಮಂಡ್ಯದ ಮಧುಚಂದನ್ ಸರ್ ಅವರ ಯಶೋಗಾಥೆ ನಮ್ಮಂತ ಸಾವಿರಾರು ಮಂದಿಗೆ ಸ್ಪೂರ್ತಿ ಸೆಲೆ. ಮಧುಚಂದನ್ ಸರ್ ರವರನ್ನ ಮಣ್ಣು ಸೆಳೆದ ರೀತಿ , ಅವತ್ತಿನ ಅವರ ಆಲೋಚನೆ ಮತ್ತು ಅವರ  ಶ್ರಮವನ್ನ ಊಹಿಸಿಕೊಂಡು  ಕವಿತೆಯೊಂದನ್ನ  ಬರೆದಿದ್ದೇನೆ. ದಯವಿಟ್ಟು ಓದಿ ಪ್ರತಿಕ್ರಯಿಸಿ  


ಮೂಗಿಗೆ ಮಳೆಯಲಿ ಮಿಂದೆದ್ದ
ಮಣ್ಣವಾಸನೆಯ  ಸೆಳೆತ
ಹದವಾದ ಮನಸಿಗೆ
ತವರ ಮಣ್ಣಿನ ಸೆಳೆತ

ಸೆಳೆತ ಹೆಚ್ಚಾಗಿ
ಮೆದುಳೆಲ್ಲಾ ಮಣ್ಣಾಗಿ
ಎರೆಹುಳಗಳ ಸಲಹೆ
ರಭಸ ತೀವ್ರವಾಗಿ

ಆಲೋಚನೆಗಳೆಲ್ಲ ಕಳಿತು
ಕಣಕಣದಲ್ಲೂ ಕುಳಿತು
ರಸವಾಗಿ ಹೊರಹೊಮ್ಮಿ
ತಂದಿರುವುದೊಳ್ಳೆ ಫಸಲು

                                 --ಕವಿತಾ ಗೋಪಿಕುಂಟೆ  

Thursday, September 15, 2016

ಕರುನಾಡ ಕಾವೇರಿ

ಭೂತಾಯಿ ಹಡೆದವ್ವ
ನಮ್ಮೆಲ್ಲರ ಜನ್ಮದಾತೆ
ಕಾವೇರಿ ನೀ ನಮ್ಮವ್ವ
ಕರುನಾಡ ಸಲಹುವಾಕೆ
ಭೂತಾಯಿ ದೇವಕಿ
ನೀನಮ್ಮ ಯಶೋದೆ
ಇಲ್ಲಿ ಹುಟ್ಟಿ ಅಲ್ಲಿ ಹರಿದು
ಕಡಲಸೇರುವೆಯೇಕೆ
ನೀನಲ್ಲಿ ಹರಿವಾಗ
ನಮಗಿಲ್ಲಿ ಪರದಾಟ
ನಿನಗಾಗಿ ಹೋರಾಟ
ನಿನಗಾಗಿ ಚೀರಾಟ
ಹೆಣಗಳ ಎಳೆದಾಟ
ರಾಜಕೀಯ ದಾಳದಾಟ
ಸಕ್ಕರೆ ಚೆಲ್ಲುವ ನಾಡಲ್ಲಿ
ಚೆಲ್ಲಾಡಿದೆ ಮಡುಗಟ್ಟಿದ ರಕ್ತ
ಕಸ್ತೂರಿ ಕಂಪಿಲ್ಲ
ಹೊಗೆಯೇ ತುಂಬಿದೆಯಲ್ಲ
ಬಾ ತಾಯೇ ಕಾವೇರಿ
ನೀ ಬೇಗ ಬಾ
ಇಲ್ಲೇ ಹುಟ್ಟಿ ಇಲ್ಲೇ ಹರಿದು
ಕಡಲ ನೀಸೇರು ಬಾ
ಕರುನಾಡ ಕಂದನ
ಸಲಹು ಬಾ
ಸಲಹಿ ವಿಜಯಪತಾಕೆ
ಹಾರಿಸು ಬಾ
ಎಲ್ಲೆಡೆಯು ಶಾಂತಿ
ನೆಮ್ಮದಿಯ ಪಸರಿಸು ಬಾ

                                    --ಕವಿತಾ ಗೋಪಿಕುಂಟೆ 

ಭಾವಬಂಧ

ಅವನಾತ್ಮ ಅವಳಲ್ಲಿ
ಅವಳಾತ್ಮ ಅವನಲ್ಲಿ
ಬದುಕೇ ಅವರಲ್ಲಿ
ಅವರೇ ಬದುಕಲ್ಲಿ
ಬದುಕಲು
ಬೆಸೆದಿಹನು ಬಂಧ
ಆ ಭಗವಂತ

ಅಲ್ಲೊಂದು ಇಲ್ಲೊಂದು
ಭವಬಂಧನಗಳ
ಬಿಸಿಬುಗ್ಗೆ ಏಳಿಸಿ
ಪರೀಕ್ಷಿಸುವನು
ಬೆಸೆದ ಬಂಧ
ಘನಗೊಳಿಸುವನು
ಭಾವಬಂಧ
ಆ ಭಗವಂತ

                    --ಕವಿತಾ ಗೇೂಪಿಕುಂಟೆ

Wednesday, August 24, 2016

ನೀ ತೊರೆದಾಗ

ನೀ ತೊರೆದಾಗ,

ಮನೆಯು ಖಾಲಿ
ಮನಸು ಖಾಲಿ
ಬದುಕೇ ಖಾಲಿಯಾಗಿದೆ

ಬೆಸೆದ ಬಂಧ
ಹೊಸೆದ ಕನಸ
ಗಂಟು ಕಳಚಿ ಬಿದ್ದಿದೆ

ಭಾವನೆಗಳ ಬಣ್ಣ ಮಾಸಿ
ತಳಮಳದ ಗೆಜ್ಜೆದನಿಗೆ
ಆರ್ತ ನಾದವೆದ್ದಿದೆ

ಜೀವ  ಸೊರಗಿ
ಜೀವನೋತ್ಸಾಹ ಬತ್ತಿ
ಬಾಳು ಬರಿದಾಗಿದೆ

                                     ಇಂತಿ,
                                     ಕವಿತಾ ಗೋಪಿಕುಂಟೆ 

ಕನ್ನಡಿ

ಮುಖ  ಮನಸಿಗಿಡಿದ ಕನ್ನಡಿ
ಮಾತು ಆಲೋಚನೆಗಿಡಿದ ಕನ್ನಡಿ
ಬರವಣಿಗೆ ವ್ಯಕ್ತಿತ್ವಕ್ಕಿಡಿದ ಕನ್ನಡಿ

ಎದುರಿಗಿರುವವ ಏನೆಂದು
ಅರಿಯಲು ಸಮಯಬೇಕಿಲ್ಲ
ಮುಖ ಮಾತು ಮತ್ತವನ
ಬರವಣಿಗೆಸಾಕು

                                ಇಂತಿ,
                                ಕವಿತಾ ಗೋಪಿಕುಂಟೆ 

Tuesday, February 16, 2016

ಅನಿಹಭಾವ ಅನಿರತ

ಹೊಳೆವ ಬಾನಿಗೆ 
ಕಳೆಗಟ್ಟಿ ನೀನಿರಲು
ಸನಿಹ ಬರಲು
ನಾ ಬಯಸಿರಲು
ಕೈಚಾಚಿ 
ಜಗವ ಮರೆತೆನೇಕೆ

ಅನಿಹ ಭಾವದಿ
ನೀ ನಗುತಿರಲು 
ಅನತಿ ದೂರದಿ
ಸರಿಯುತಿರಲು
ಮತ್ತೆ ಬಾಗಿ
ನಿನ್ನ ಕರೆದೆನೇಕೆ

ನಿರಾಸೆ ಕೋಪದಿ
ಮನದಾಸೆ ನೂಕಲು 
ನೀರವ ಮೌನದಿ 
ಸರಿದು ನಡೆಯಲು 
ಹಿಂದೆ ಹಿಂದೆಯೆ
ನೀ ಹಿಂಬಾಲಿಸುವೇಕೆ

ನಾ ಸುಮ್ಮನೆ
ನಿಂತರೂ
ನಿನ ನೋಡದೆ
ಕುಂತರೂ
ಎಲ್ಲೆಲ್ಲೂ ಬೆಂಬಿಡದೆ
ಕಾಡುವೆಯೇಕೆ

ಕಣ್ಣೀರು ತುಂಬಿ
ಹೊರಳಿದರೂ
ಮನಕರಗಿ ಹಗುರಾಗಿ
ಜಾರಿದರೂ
ಕೋಪ ಸರಿಯದಿಂದು
ಎಂದೆಂದೂ ...

                                                ಇಂತಿ ,
                                                ಕವಿತಾ ಗೋಪಿಕುಂಟೆ

Friday, January 29, 2016

ರಾಜಕೀಯ ಕವಿತೆ

ಮಂದಿರ ಮಸೀದಿಗಳಲಿ
ಚರ್ಚ್ ಬಸದಿಗಳಲಿ
ಹುಟ್ಟುತ್ತಿತ್ತು
ಜಾತಿಮತ ಪಂತವಿಲ್ಲದ
ಬಡವಬಲ್ಲಿದನೆಂಬ
ಭೇದವಿಲ್ಲದ ನನ್ನ ಕವಿತೆ

ಮನಶಾಂತಿಗಾಗಿ
ಸಮಾಜದ ಒಳಿತಿಗಾಗಿ
ಸಾರುತ್ತಿತ್ತು
ಒಗ್ಗಟ್ಟಿನಲ್ಲಿ ಬಲವಿದೆಯೆಂದು
ಎಲ್ಲರಿಗು ಸುಖವಿದೆಯೆಂದು

ಸ್ವಾರ್ಥ ರಾಜಕೀಯದಲ್ಲಿ  
ಅಧಿಕಾರದ ದುರಾಸೆಯಲ್ಲಿ
ಹುಟ್ಟುತಿಹುದು 
ಧರ್ಮಜಾತಿ ಪಟ್ಟಿ ಹೊತ್ತು
ಸಮಾಜ ಹೊಡೆದು
ಉರುಳಿಸಲು ನನ್ನ ಕವಿತೆ

ಜನರ ಓಟಿಗಾಗಿ
ಅಧಿಕಾರದ ಸೀಟಿಗಾಗಿ
ತೋರುತಿಹುದು
ಹೊಡೆಯುವುದರಲಿ ಜಾಣ್ಮೆಯಿದೆಯೆಂದು
ಇದರಲಿ ಸ್ವಾರ್ಥಸುಖವಿದೆಯೆಂದು

ಹೊಡೆದ ಇಭ್ಬಾಗದಲಿ
ಐಕ್ಯತೆ ಸಾರುವ ದೊಂಬರಾಟದಲಿ  
ಬಿತ್ತುತಿದೆ  ದ್ವೇಷಬೀಜ
ಮೊಳೆದು ಗಿಡವಾಗಿ
ಹೆಮ್ಮರವಾದಾಗ ಜಾಣಮೌನ
ವಹಿಸುವುದು ನನ್ನ ಕವಿತೆ

ಧ್ವೇಷ ಕಿಡಿ ಜ್ವಾಲೆಯಲ್ಲಿ
ತನ್ನ ಬೇಳೆ ಬೇಯಿಸಿ 
ತೋರುವುದು
ಯುವಭವಿಷ್ಯ ಕಮರಿಸುವುದೇಗೆಂದು 
ತನ್ನ ನಾಳೆಗಳ ಹಸನಾಗಿಸುವುದೇಗೆಂದು

ಇಂತಿ,
ಕವಿತಾ ಗೋಪಿಕುಂಟೆ

Thursday, January 28, 2016

ಅವನಲ್ಲದ ಅವಳು

"ನಾನು ಅವನಲ್ಲ ಅವಳು" ಸಿನಿಮಾದ  ಬಗ್ಗೆ ತುಂಬಾ ಕೇಳಿದೆ. ಇದೇ ಸಿನಿಮಾ ಸಂಚಾರಿ ವಿಜಯ್ ಅವರಿಗೆ ರಾಷ್ಟ್ರಪ್ರಶಸ್ತಿಯನ್ನೂ, ನಾಗರಾಜ್ ರವರಿಗೆ ಮೇಕಪ್ಪಿಗೆ ರಾಷ್ಟ್ರಪ್ರಶಸ್ತಿಯನ್ನೂ ತಂದು ಕೊಟ್ಟಿತು.ಸ್ನೇಹಿತರೆಲ್ಲಾ ಸಿನಿಮಾ ನೋಡಿದರು ಚೆನ್ನಾಗಿದೆ ಅಂತ ಹೇಳಿದರು ಅದರೂ ನಾ ನೋಡಲಾಗಲಿಲ್ಲ. ಇವತ್ತು ಹೀಗೆ ಸುಮ್ಮನೆ ನೋಡಿದೆ ಮನ ಕಲಕಿಬಿಟ್ಟಿತು ನನ್ನ ಒಳಗೆ  ಒಂದುತೆರೆನಾದ ಬೆಂಕಿಯಂತ ಭಾವನೆ ಹುಟ್ಟಿಬಿಟ್ಟಿತು .ಅದು ಅವರ ಬಗ್ಗೆ ಕನಿಕರವೋ ಅಥವಾ ಕಾಳಜಿಯೋ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯೋ ತಿಳಿಯುತ್ತಿಲ್ಲ. ಆದರೆ ಅವರ ಆಸೆ, ಭಾವನೆ ,ತಳಮಳ, ಅವರ ಭವಿಷ್ಯದ ಬಗೆಗಿನ ಕಳವಳವನ್ನ ನನ್ನದೇ ಕವನದಲ್ಲಿ ಹೊರಹಾಕಿದ್ದೇನೆ. ದಯವಿಟ್ಟು ಓದಿ ಪ್ರತಿಕ್ರಯಿಸಿ 

ಎಡ ಉಂಟು ಬಲ ಉಂಟು
ಯಾವುದೀ ಮಧ್ಯವು
ಅವನುಂಟು ಅವಳುಂಟು
ಏನಿದೀ ದ್ವಂದ್ವವು

ದೇಹ ಅವನು
ಆತ್ಮ ಅವಳು
ಎನಿತು ಈ
ಮಧ್ಯ ಭಾವವು

ನಾ ಅವನಲ್ಲ ಅವಳೆಂದಾಕ್ಷಣ
ಮಗನಾಗಿ ಕಂಡ ಅಪ್ಪ
ಸಮಾಜಕೆದರಿ
ಮನೆ ಬಿಟ್ಟೋಡಿಸುವನು

ಕೈಚೆಲ್ಲಿ ಅಮ್ಮ
ಅಪ್ಪನಿಗೆದರಿ 
ಅರೆಮನಸಲಿ ಹೊರದೂಡುವಳು

ಕಗ್ಗತ್ತಲ ಜಗದಲ್ಲಿ
ಹೋಗುವುದಾದರು ಎಲ್ಲಿಗೆ
ಕಗ್ಗಲ್ಲಿನ ಜನರ ನಡುವೆ
ಮುನ್ನುಗ್ಗಿ ನಿಲ್ಲುವುದಾದರು ಹೇಗೆ

ಅವಳಾಗುವಾಸೆ ತುಳಿದಿಟ್ಟು
ಅವನೆಂಬ ಮುಖವಾಡ
ಹೇಗೆ ಹೊತ್ತು ನಡೆಯಲಿ

ಕತ್ತಲೆ ಕೋಣೆಯಲಿ
ಆಗಾಗ ಅವಳಾಗಿ
ಇನ್ನೆಷ್ಟು ದಿನ ಮೆರೆಯಲಿ

ಡೋಲಾಯ ಮನಸಿಟ್ಟು
ಬೇಡದ ಜೀವನದಿ
ಹೇಗೆ ನಾ ಬಾಳಲಿ

                                                    ಇಂತಿ,
                                                    ಕವಿತಾ ಗೋಪಿಕುಂಟೆ

Friday, January 22, 2016

ಪ್ರೀತಿ ಅಪಾರ

ಜ್ಞಾನ ತುಂಬಾ ಭಾರ
ಸಾಧನೆ ಬಲು ಕಠೋರ
ಆದರೆ
ಅದರ ಪ್ರೀತಿ ಅಪಾರ
ತುಂಬಿಡುವ ಬಾರಾ

ತುಂಬಿದೊಷ್ಟು
ಹೆಚ್ಚಾಗಲಿ ದಾಹ
ಎಂದೂ
ಬತ್ತದಿರಲಿ ಮೋಹ

                                      ಇಂತಿ,
                                      ಕವಿತಾ ಗೋಪಿಕುಂಟೆ

ಅಳಿವಿನಂಚಿನ ಗುಬ್ಬಚ್ಚಿ

ಹುಟ್ಟಿ ಮುಳುಗುವ ಸೂರ್ಯ
ಹೊಟ್ಟೆ ಹಸಿದ ಸದ್ದು
ಆಗೊಮ್ಮೆ ಈಗೊಮ್ಮೆ
ಬರ್ರೆಂದು ಬರುವ
ಬಸ್ಸುಗಳಾಗಿದ್ದವು
ನಮ್ಮಪ್ಪನ ಗಡಿಯಾರಗಳು

ಹೊಲ ಮೀಟುವ
ನೇಗಿಲ ಸದ್ದು
ಎತ್ತಿನ ಕೊರಳಿನ
ಘಂಟೆಯ ನಾದ
ಗುಬ್ಬಚ್ಚಿ ಪಿಳಿಕಾರದ
ಟಿವ್ ಟಿವ್
ಮಾತುಗಳಾಗಿದ್ದವು
ಸಂಗೀತ ಕಛೇರಿಗಳು

ಇದ ಆಸ್ವಾದಿಸಿ
ಅನಂದಿಸುವಪ್ಪನಿಗೆ
ತಂದುಕೊಟ್ಟೆವು
ಮಾಯಬಜಾರಿನ
ಮೊಬೈಲನು
ತೂಗಾಕಿದೆವವನ
ಕೊರಳಿಗದನು

ಮರೆತೇ ಬಿಟ್ಟನು ಅಪ್ಪ
ಎಲ್ಲವನು
ಮೆಚ್ಚಿದನು ಮೊಬೈಲಿನ
ಚಮತ್ಕಾರವನು

ಕಳೆದವು ಮಾಸ
ವರುಷಗಳು
ಬೇಸರ ತರಿಸಿದವು
ಮೊಬೈಲುಗಳು

ಹಿಂತಿರುಗಿ ನೋಡುವ
ಆಸೆಯು ಬಂದಿತು
ಅಪ್ಪನಿಗೆ
ಎಲ್ಲವು ಮೊದಲಾಗೆ
ಕಂಡವವನಿಗೆ
ಆದರೆ
ಮೊಬೈಲಿನ
ಮಾಯಾಜಾಲಕೆ ಸಿಕ್ಕಿ
ಗೂಡು ಬಿಟ್ಟು
ಮಾಯವಾದವು
ಗುಬ್ಬಿಗಳು

ಎಲ್ಲುಡುಕಿದರು ಕಾಣದೆ
ಅಳಿವಿನಂಚಿಗೆ ಬಂದು ನಿಂತವು
ನಮ್ಮ ಗುಬ್ಬಚ್ಚಿಗಳು
ಈಗಲಾದರೂ ಅರಿಯದೆ ಹೋದರೆ
ಸೇರುವವು ಗತ ಇತಿಹಾಸವನು

                                                   ಇಂತಿ,
                                                   ಕವಿತಾ ಗೋಪಿಕುಂಟೆ

Thursday, January 21, 2016

ಕಲ್ಮಶ - ನಿಷ್ಕಲ್ಮಶ

ನೀರು, ಸತ್ಯ, ಮನಸ್ಸು
ನಿಷ್ಕಲ್ಮಶ

ನೀರಿಗೆ ಬಣ್ಣ
ಸತ್ಯಕ್ಕೆ ಸುಳ್ಳು
ಮನಸ್ಸಿಗೆ ಅಸೂಯೆ
ಬೆರೆತಾಗ
ಎಲ್ಲವೂ ಕಲ್ಮಶ

ಕಲ್ಮಶಕ್ಕೆ ಆಯಸ್ಸಿಲ್ಲ
ನಿಷ್ಕಲ್ಮಶ ಅಜರಾಮರ

                                          ಇಂತಿ,
                                          ಕವಿತಾ ಗೋಪಿಕುಂಟೆ

Tuesday, January 19, 2016

ಮೆಚ್ಚಿ ಹಚ್ಚಾಗುವ ಕವಿತೆ

ನನ್ನ ನೆಚ್ಚಿನ ಲೇಖಕರಲ್ಲಿ ಒಬ್ಬರಾದ ವಸುಧೇಂದ್ರ ಸರ್ ರವರ, ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಸಂದರ್ಶನದಲ್ಲಿದ್ದ ""ಬರವಣಿಗೆ ನನಗೆ ದೇವರು ನೀಡಿರುವ ಕೌಶಲ. ಬರೆಯದೆ ಹೋದರೆ ನನಗೆ ದೊರೆತ ವರವನ್ನು ಅವಮಾನಿಸಿದಂತೆ."" ಅನ್ನುವ ಸಾಲಿನಿಂದ ಪ್ರೇರೇಪಿತಗೊಂಡು ಈ ಕೆಳಗಿನ ಕವಿತೆಯನ್ನು ಬರೆದಿದ್ದೇನೆ.
ಅವರ ಮಾತಿನಂತೆ ದೇವರು ನನಗೆ ನೀಡಿರುವ ವರವನ್ನು ಅವಮಾನಿಸದಂತೆ ಉಳಿಸಿಕೊಳ್ಳುವೆ.
ಬಿಡುವಿನ ವೇಳೆಯಲ್ಲಿ ಬರೆಯದೆ, ಬರೆಯುವುದಕ್ಕೊಸ್ಕರ ಬಿಡುವು ಮಾಡಿಕೊಂಡು ಬರೆದು ದೇವರು ಕೊಟ್ಟ ವರವನ್ನ ಮತ್ತಷ್ಟು ಗೌರವಿಸಬೇಕೆಂದಿದ್ದೇನೆ.

ಮೊದಲೆಲ್ಲ ಹುಡುಕುತ್ತಿದ್ದೆ
ನನ್ನೊಳಗಿಹ ಕವಿತೆ
ಆದರೀಗ ಹುಡುಕುತಿಹೆನು
ನನ್ನೊಳಗಿನ ಕವಿತ 


ಜಂಜಾಟದಿ ಮುಳುಗಿ
ದೇವರ ವರವ ಮರೆತು
ಶೂನ್ಯದೆಡೆ ನಡೆವಾಗ
ಮುತ್ತೊಂದ ಕಂಡು
ತಪ್ಪಿನರಿವಾಗಿ
ನನ್ನೊಳಗೆ ಹುಡುಕುತಿಹೆನು

ದುಗುಡ ದುಮ್ಮಾನಗಳ
ಹೆಕ್ಕಿತೆಗೆದು
ಅರೆಬೆಂದ ಕವಿತೆಗಳ
ಕಾಯಿಸಿ ಹಚ್ಚಾಗಿಸಲು
ಹುಡುಕುತಿಹೆನು

ಸಿಕ್ಕಾಳೆ ಆ
ನನ್ನ ಕವಿತ
ಹುಡುಕುವಳೆ
ಮೆಚ್ಚಿ ಹಚ್ಚಾಗುವ
ಕವಿತೆಗಳ

                                                             ಇಂತಿ,
                                                             ಕವಿತಾ ಗೋಪಿಕುಂಟೆ