ಬಂದಿಲ್ಲ ಮಳೆ
ಬಿತ್ತಿಲ್ಲ ಬೆಳೆ
ಬತ್ತಿಹುದು ತೊರೆ
ಹಿಂಗಿಹುದು ಕೆರೆ
ಬಂದಿಹುದು ಬರಗಾಲ
ತಂದಿಹುದು ಹಾಹಾಕಾರ
ಕುಡಿಯಲು ನೀರಿಲ್ಲ
ದನಕರುಗೆ ಮೇವಿಲ್ಲ
ಸರ್ಕಾರದವರು ಬಂದು
ಬರಪರಿಹಾರ ಘೋಷಿಸಿದರು
ಲಕ್ಷ ಲಕ್ಷ ನಿಧಿಯ
ಕಡತದಲ್ಲಿ ತೋರಿಸಿದರು
ಕಾಲುವೆಯ ದಾಹದಂತೆ
ಅಧಿಕಾರಿಗಳ ಧನದಾಹದಿ
ಹೆಸರಿಗೆ ಬಂದದ್ದು
ಕೈಗೆ ಬಾರದಾಗಿ
ಗಂಜಿಗಾಗಿ ಪರದಾಡಿ
ದನಕರುಗಳ ಮಾರಿ
ಹೊಲಮನೆಯ ಅಡವಿಟ್ಟು
ಸಾಲಗಾರನಾಗಿ
ಕಣ್ಣು ಬಾಯಿಬಿಟ್ಟು
ಪರಿಹಾರಕಾದು ಬೇಸರಿಸಿ
ವಿಧಿಯಿಲ್ಲದೆ ಹೊರಟಿಹನು
ನಮ್ಮ ರೈತ ಗುಳೆ
--ಕವಿತಾ ಗೋಪಿಕುಂಟೆ