Thursday, February 16, 2012

ಶ್ರೀಕೃಷ್ಣನಂತ ಮಗ ಶ್ರೀರಾಮನಂತ ಗಂಡ...

ನನಗೆ ಮಾತು ಅಂದ್ರೆ ಬಹಳ ಇಷ್ಟ... ಎಷ್ಟು ಇಷ್ಟ ಅಂದ್ರೆ ಅದುನ್ನ ಹೇಳೋಕೆ ಆಗಲ್ಲ...!

"ಸತ್ತಮೇಲೆ ಮಲಗೋದು ಇದ್ದಿದ್ದೆ ಇವಾಗ ಎದ್ದು ಕೆಲಸ ನೋಡಿಅಂತ ಯಾರೋ ಮಹಾನುಭಾವರು ಹೇಳಿದ ಮಾತುಗಳನ್ನ ಎಲ್ಲೋ ಓದಿದ ನೆನಪು. ಅದೇ ಮಾತನ್ನ "ಸತ್ತ ಮೇಲೆ ಬಾಯಿ  ಮುಚ್ಚೋದು ಇದ್ದಿದ್ದೆ ಇವಾಗ ಎಷ್ಟು ಬೇಕೋ ಅಸ್ಟು ಮಾತಾಡಿ" ಅಂತ  change ಮಾಡಣ ಅಂತ ಯೋಚನೆ ಮಾಡುತ್ತಾ ಇದೀನಿ.

ನನ್ನ ಎಲ್ಲ ಸ್ನೇಹಿತರು ನನಗಿಂತ ದೊಡ್ಡವರು. ಸ್ಕೂಲ್ ಇಂದ ಕಾಲೇಜ್ ವರೆಗೂ ನಾ ಜಾಸ್ತಿ ಜೊತೆ ಇರುತ್ತಾ ಇದ್ದಿದ್ದು  ಬರೀ ಸೀನಿಯರ್ ಅಕ್ಕಂದಿರ ಜೊತೆನೆ.
ಈಗ ಕೂಡ ಆಫೀಸ್ ಅಲ್ಲಿ ಗಂಟೆ ಗಟ್ಟಲೆ ಮಾತಾಡೋದು ನನಗಿಂತ ದೊಡ್ಡ ಅಕ್ಕಂದಿರ ಜೊತೆ

ನಾವು ಮಾತಾಡುವಾಗೆಲ್ಲ ಮಾತಿನ ಮೊದ ಮೊದಲು ನಮ್ಮ ನಮ್ಮ ಕಷ್ಟ ಸುಖಗಳ ಬಗ್ಗೆ ಮಾತನಾಡುತ್ತೇವೆ. ಆಮೇಲೆ ಇದ್ದಿದ್ದೆ ಎಲ್ಲ ಹುಡುಗಿಯರ ತರ Dress, Make up items  ಹಾಗೆ ಹೀಗಿನ ಟ್ರೆಂಡ್ ಬಗ್ಗೆ ಸ್ವಲ್ಪ ಚರ್ಚೆ, ಆಮೇಲೆ ಅವರ ಸಂಸಾರದ ಸುಖ ದುಃಖ ಇಷ್ಟ ಕಷ್ಟಗಳನ್ನ ಎಳೆಎಳೆಯಾಗಿ ಬಿಚ್ಚಿಇಡುತ್ತಾರೆ. ಅದರಲ್ಲಿ ಕೆಲವೊಂದು ತುಂಬಾ ದುಃಖ ತರಿಸುತ್ತವೆ, ಥೂ... ಇಷ್ಟೇನಾ ಹುಡುಗಿಯರ ಜೀವನ, ಇಷ್ಟೇನಾ ಹುಡುಗಿಯರ ಭಾವನೆಗಳಿಗೆ ಸಮಾಜ ಕೊಡೊ ಬೆಲೆ ಅನಿಸಿದರೆ ಮತ್ತೆ ಕೆಲವೊಂದು ನನಗೆ ಗೊತ್ತಿಲ್ಲದೇ ನನ್ನನ್ನ ಎಲ್ಲಿಗೋ ಕದ್ದು ಹೋಗುತ್ತವೆ.

ಪ್ರತಿ ಸಾರಿ  ನಾವು ಮಾತನಾಡುವಾಗ ನನ್ನನ್ನ ಯೋಚನಾ ಲೋಕಕ್ಕೆ ಕದ್ದು ಹೋಗೋ ವಿಷಯದ ಬಗ್ಗೆ ಬರಿತಾ ಹೋಗುತ್ತೇನೆ ನೀವು ಓದುತ್ತ ಬನ್ನಿ ನೋಡೋಣ ನನ್ನ ನಿಮ್ಮ ದೋಣಿ ಎಲ್ಲಿಗೆ ಹೋಗಿ ಸೇರುತ್ತವೆ ಅಂತ...


ನಾ ಕೇಳಿರೋ ಹಾಗೆ ನೋಡಿರೋ ಹಾಗೆ ಪ್ರತಿಯೊಬ್ಬ ಹೆಣ್ಣು ನನಗೆ ಶ್ರೀಕೃಷ್ಣ ನಂತ ಮಗ ಬೇಕು, ಶ್ರೀರಾಮ ನಂತ ಗಂಡ ಬೇಕು ಅಂತ ತನ್ನ ಮನದಾಳದಲ್ಲಿ ಆಸೆಯನ್ನ ಇಟ್ಟುಕೊಂಡಿರುತ್ತಾಳೆ.

ಶ್ರೀಕೃಷ್ಣ ಕೂಡ ಪರಮಾತ್ಮ, ಶ್ರೀ ರಾಮ ಕೂಡ ಪರಮಾತ್ಮ ಆದ್ರೆ ಇಲ್ಲಿ ಎಲ್ಲರು ತನ್ನ ಗಂಡ ಶ್ರೀರಾಮಚಂದ್ರನ ತರ ಏಕ ಪತ್ನಿ ವ್ರತಸ್ತನಾಗಿ ಇರಬೇಕು ಅಂತ ಬಯಸುತ್ತಾರೆ  ಆದ್ರೆ ಮಗನ ವಿಷಯಕ್ಕೆ ಬಂದಾಗ ಶ್ರೀಕೃಷ್ಣ ನಂತ ಮಗ ಇರಬೇಕು ಅಂತ ಬಯಸುತ್ತಾರೆ ಯಾಕೆ...?

ಪ್ರತಿಯೊಬ್ಬ ಹೆಣ್ಣು ನಡೆದಾಡುವ ದೇವರು ಅಂತ ಅಂದುಕೊಂಡಿರುವ ತನ್ನ ಗಂಡನಿಗಿಂತ ಮಗನನ್ನ ಜಾಸ್ತಿ ಪ್ರೀತಿಸುತ್ತಾಳೆ. ಗಂಡನ ಬಗ್ಗೆ ಕಾಣದಂತ ಕನಸುಗಳನ್ನ ಮಗನ ಮೇಲೆ ಕಟ್ಟಿರುತ್ತಾಳೆ. ನನ್ನ ಮಗ ಸಾವಿರ ಜನರ ಮದ್ಯೆದಲ್ಲಿ ಇದ್ದರು, ಎಲ್ಲರ ಮದ್ಯೆ ಎದ್ದು ಕಾಣಬೇಕು, ಎಲ್ಲರ ದೃಷ್ಟಿ ಅವನಲ್ಲೇ ಇರಬೇಕು, ಅವನು ಹರಳು ಉರಿದಂತೆ ಮಾತಾಡಬೇಕು, ಅವನ ತುಂಟಾಟದಿಂದ ನನ್ನನ್ನ ಕಾಡಿಸಬೇಕು, ನನ್ನನ್ನ ಗೋಳಾಡಿಸಬೇಕು ಹೀಗೆ ನೂರಾರು ಕನಸು ಕಟ್ಟಿರುತ್ತಾಳೆ.

ಒಂದು ಹಂತದಲ್ಲಿ ಗಂಡನ ಮೇಲೆ ಇರುವ possessiveness ಗಿಂತ ಮಗನ ಮೇಲೆ ಒಂದು ಪಾಲು ಜಾಸ್ತಿನೆ ಇರುತ್ತೆ. ಮಗನ ಮೇಲಿನ ಅತಿಯಾದ ಪ್ರೀತಿಯಿಂದ ಬಂದಿರೋ ಸೊಸೆ ಎಲ್ಲಿ ನನ್ನ ಮಗನನ್ನ ನನ್ನಿಂದ ದೂರ ಮಾಡಿ ಬಿಡುತ್ತಾಳೋ ಅನ್ನೋ ಭಯದಿಂದ, ತಾನೇ ಪ್ರೀತಿಯಿಂದ ಆರಿಸಿ ತಂದ ಸೊಸೆಯನ್ನ ಶತ್ರು ತರ ನೋಡೋದಿಕ್ಕೆ ಶುರು ಮಾಡುತ್ತಾಳೆ.

ಹೀಗಿರುವಾಗ  ಗಂಡ ಮಾತ್ರ ಶ್ರೀರಾಮ ಆಗಿರಬೇಕು ಮಗ ಮಾತ್ರ ಶ್ರೀಕೃಷ್ಣ ಆಗಿರಬೇಕು ಅಂತ ಬಯಸುತ್ತಾಳಲ್ಲ ಯಾಕೆ ....?

ಗಂಡನ ತಪ್ಪನ್ನ ಕ್ಷಮಿಸದ ಹೆಣ್ಣು ಮಗನ ತಪ್ಪನ್ನ ಸಲಿಸಾಗಿ ಕ್ಷಮಿಸಿ ಮಗನ ಪರ ವಹಿಸುತ್ತಳಲ್ಲ ಯಾಕೆ..?

ಯಾವುದೇ ಹೆಣ್ಣು ನನ್ನ ಗಂಡ ಶ್ರೀಕೃಷ್ಣ ನಂತೆ ಇರಲಿ ಅಂತ ಬಯಸಿದ್ದನ್ನ ನಾ ನೋಡೇ ಇಲ್ಲ.ಪುರಾಣದಲ್ಲಿ ಶ್ರೀಕೃಷ್ಣ ನೆ ನನ್ನ ಗಂಡ ಅಂತ ಅವನಿಗಾಗಿ ಕಾದಿದ್ದ ಮೀರಾ, ವಯಸ್ಸಿನ ಅಂತರವಿದ್ದರೂ ಪ್ರಾಣನಾಥ ಎಂದು ಪ್ರೀತಿಸಿದ ರಾಧೇ, ಕೃಷ್ಣ ನನ್ನು ವರಿಸಿದ ರುಕ್ಮಿಣಿ, ಸತ್ಯ ಭಾಮೆ ಮನಸ್ಸು ಎಂತಹದ್ದು ಅಂತ ಯೋಚಿಸಿದರೆ ಅವರೆಲ್ಲರ ಮನಸ್ಸು ನಿಗೂಡ ಅನಿಸುತ್ತದೆ ಅಲ್ಲವೇ..?

ಕೆಲವು ಪುರುಷ ಮಹಾಶಯರು ಹೀಗಿನ ಕಾಲದಲ್ಲೂ ಎರಡು ಮೂರು ಮದುವೆ ಆದವರು ಇದ್ದಾರೆ. ಆದರೆ ತನ್ನ ಗಂಡನೇ ಚಾರಿತ್ರ ಗೊತ್ತಾದಾಗ ಎಲ್ಲಾ ಹೆಂಡತಿಯರು ಸೇರಿಕೊಂಡು ಗಂಡನ ಮರ್ಯಾದೆ ಹರಾಜು ಹಾಕೊದಂತು guarantee ...

ಆದ್ರೆ ರುಕ್ಮಿಣಿ ಸತ್ಯಭಾಮೆಯರು ಕೃಷ್ಣ ಎಲ್ಲಾ ಚಾರಿತ್ರ ಗೊತ್ತಿದ್ದರೂ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರು ನಿಜವಾಗಿಯೂ ಅಸ್ಟೊಂದು ಸಹನೆ ಉಳ್ಳವರಾಗಿದ್ದರೋ  ಅಥವಾ ಎಲ್ಲಾ ಕಂಡು ಗಂಡನ ಮರ್ಯಾದೆ ತೆಗೆಯುವುದು ಬೇಡ ಎಂದು ಸುಮ್ಮನಿದ್ದರೋ ಗೊತ್ತಿಲ್ಲ.  

ಆದರುಹೆಣ್ಣು ಉಟ್ಟ ಸೀರೆ ಬೇಕಾದರು ಹಂಚಿಕೊಂಡಾಳು ಕಟ್ಟಿಕೊಂಡ ಗಂಡನನ್ನ ಹಂಚಿಕೊಳ್ಳಲಾರಳು”  ಎಂಬ ಗಾದೆ ಇದೆ ಅದರಂತೆ ನೋಡಿದರೆ ರುಕ್ಮಿಣಿ ಭಾಮೆಯರ ಮನಸ್ಸು ಮಾತ್ರ ತರ್ಕಕ್ಕೆ ನಿಲುಕದಂತಿದೆ ಅಲ್ಲವೇ...?

ಇದೆಲ್ಲ ನೋಡಿದರೆ  "ಮೀನಿನ ಹೆಜ್ಜೆ ಬೇಕಾದರೂ ಕಂಡು ಹಿಡಿಬಹುದು ಹೆಣ್ಣಿನ ಮನಸು ಅರಿಯೋದು ಕಷ್ಟ" ಅನ್ನೋ ಮಾತು ಅಕ್ಷರ ಸಹ ನಿಜ ಅನಿಸುತ್ತೆ ಅಲ್ವಾ...?


                                                           ಇಂತಿ
                                                                     ಕವಿತಾ ಗೌಡ 



 

No comments:

Post a Comment

Note: Only a member of this blog may post a comment.