Wednesday, April 10, 2013

11/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ " ಮತ್ತೆ ಬಂದಿದೆ ಯುಗಾದಿಯು "


ಮತ್ತೆ ಬಂದಿದೆ ಯುಗಾದಿಯು

ಬರಡಾಗಿ ನಿಂತ ಮರಕೆ
ಮತ್ತೆ ಕಳೆಯ ತುಂಬಲು
ಚಿಗುರೊಡೆದು ಹಸಿರಾಗಿ
ಮತ್ತೆ ಬಂದಿದೆ ಯುಗಾದಿಯು

ಹೊಂಗೆ ಜೇನ ಸಂಭ್ರಮದಿ
ಕೋಗಿಲೆಯ ಹೊಸ ಧ್ವನಿಯಲಿ
ಹೊಸ ವರುಷದ ಹೊಸ ನಾದದಿ
ಮತ್ತೆ ಬಂದಿದೆ ಯುಗಾದಿಯು

ಬಿತ್ತು ಹೊತ್ತು ದಣಿದ ರೈತನಿಗೆ
ಬಿಡುವು ಕೊಡಲೆಂಬಂತೆ
ಹೊಸ ವರುಷದ ಹರುಷವ
ಕೊಂಡು ತಂದಿದೆ ಈ ಯುಗಾದಿಯು

ಬಿರಿದು ಉರಿಯುತಿರುವ
ಮೈ ತಣಿಸಲು
ಎಣ್ಣೆ ಸ್ನಾನದ ನೆಪದಲಿ
ಮತ್ತೆ ಬಂದಿದೆ ಯುಗಾದಿಯು

ತಳಿರು ತೋರಣ ಕಟ್ಟಿ
ಸಿಹಿ ಊರಣದ ಹೊಬ್ಬಟ್ಟನ್ನು ತಟ್ಟಿ
ಬೇವು ಬೆಲ್ಲದ ಜೊತೆಗೆ
ಜೀವನದಿ ಸಿಹಿ ಕಹಿಯ ಸಮನಾಗಿ ಸಂಭ್ರಮಿಸಲು
ಮತ್ತೆ ಬಂದಿದೆ ಯುಗಾದಿಯು

ಇಂತಿ,
      ಕವಿತಾಗೌಡ


Sunday, April 7, 2013

7/4/2013 ರ ಪ್ರಜಾಪ್ರಗತಿ ಪತ್ರಿಕೆಯಲ್ಲಿ ನನ್ನ ಕವನ "ನಾ ಬರೀ ಭ್ರೂಣವಲ್ಲ"

ನಾ ಬರೀ ಭ್ರೂಣವಲ್ಲ


ಕರುಳ ಕುಡಿ ಚಿಗುರುತಿಹುದು
ಎಂದು ನೀ ತಿಳಿದಾಗ
ಎಷ್ಟು ಸಂತೋಷ ಪಟ್ಟೆ
ಅದೇ ನಾ ಹೆಣ್ಣೆಂದು ತಿಳಿದಾಗ
ಏಕೆ ಈ ಬೇಕು ಬೇಡಗಳ ತೊಳಲಾಟ

ನಾ ಬರೀ ಭ್ರೂಣವಲ್ಲ
ನಿನ್ನದೇ ಒಂದು ಭಾಗ
ನಿನ್ನುಸಿರಿನ ಉಸಿರು
ನಿನ್ನದೇ ಒಂದು ಕನಸು
ಅದು ನಿನಗೆ ತಿಳಿಯದೆ

ನಾ ನಿನಗೆ ಬೇಡವೋ
ಈ ಪ್ರಪಂಚಕ್ಕೆ ಬೇಡವೋ
ಅದ ನಾನರಿಯೆ
ಆದರೂ ತಿಳಿಯುತಿಹುದು ನನಗೆ
ಅನಿಷ್ಟವೆಂದು ಕಟ್ಟಿರುವ ಹಣೆಪಟ್ಟ

ನಾನೊಂದು ಜೀವ
ನನಗೊಂದು ಮನಸಿದೆ
ಅದಕು ಸಾವಿರ ಕನಸಿದೆ
ಕಣ್ಣಬಿಡುವ ಮುನ್ನವೆ
ಕಳಚಿ ಹಾಕುವ ಮನವೇಕೆ

ಹೆಣ್ಣೆಂಬ ಕಾರಣಕೆ
ಹುಣ್ಣಂತೆ ಕಂಡು
ಹಣ್ಣಂತೆ ಕೊಚ್ಚಿ
ಪ್ರಾಣವ ಹಿಂಡುವ
ಕಲ್ಲು ಹೃದಯವೇಕೆ

ನನ್ನ ಮಿಡಿತವನರಿಯದೆ
ಮಣ್ಣಾಗಿಸುವ ಮುನ್ನ
ನೀ ಕೂಡ ಹೆಣ್ಣಿಂದಲೇ 
ಕಣ್ಣ ಬಿಟ್ಟಿರುವೆಯೆಂಬ
ಸತ್ಯವ ಮರೆತೆಯೇಕೆ

         ಇಂತಿ,
                 ಕವಿತಾಗೌಡ

Sunday, March 3, 2013

3/3/2013 ರ ಪ್ರಜಾ ಪ್ರಗತಿ ದಿನಪತ್ರಿಕೆಯಲ್ಲಿ ನನ್ನಕವನ "ಬರಗಾಲದ ತಾಂಡವ"



ಬರಗಾಲದ ತಾಂಡವ


ಬರಗಾಲ ಬಂದಿಹುದು
ಕೆರೆ ಬತ್ತಿ ಬರಿದಾಗಿಹುದು
ಹೊಲ ಒಣಗಿ ಬಿರಿಯುತಿಹುದು
ಭೂಮಿ ಕಾದು ಸುಡುತಿಹುದು 

ಮನೆಯಲ್ಲಿ ಕಾಳಿಲ್ಲ
ಕೈಯಲ್ಲಿ ಕಾಸಿಲ್ಲ
ದನಕರುಗೆ ಮೇವಿಲ್ಲ
ಊರಲ್ಲಿ ಕಳೆ ಇಲ್ಲ

ಪ್ರತಿನಿತ್ಯ ಉಪವಾಸ
ನೀರಿಗೂ ಪರದಾಟ
ಪ್ರಾಣಿಗಳ ಚೀರಾಟ
ನರರ ನರಳಾಟ 

ನೂರಾರು ಬೇನೆಗಳು
ಸಾಲು ಸಾಲು ಸಾವುಗಳು
ಮುಗಿಲು ನೋಡೊ ಕಣ್ಣುಗಳು
ಅಸಹಾಯಕ ಮುಖಗಳು 

ಊರು ಊರಾಗಿಲ್ಲ ಸ್ಮಶಾನವಾಗಿಹುದು
ಎಲ್ಲೆಲ್ಲು ಸೂತಕದ ಛಾಯೆ ಆವರಿಸಿಹುದು
ದೇಹ ಬೆಂಡಾಗಿಹುದು
ಮನಸು ಬೆಂದೋಗಿಹುದು
 

ಮಳೆರಾಯ ಕರುಣೆಯಿಟ್ಟು
ನನ್ನೂರಿಗೆ ಬಾ ಇಂದು
ಸೂತಕವ ಕಳೆದು ತುಂಬು ಹೊಸ ಜೀವಕಳೆಯನ್ನು
ಕೊಡು ಎಲ್ಲರಲಿ ಚೈತನ್ಯವನ್ನು

        ಇಂತಿ,
                 ಕವಿತಾ ಗೌಡ